Karada Vishwa

Article · July 16, 2026

ಬದುಕಿನ ಬುತ್ತಿ

✍🏻 ಅಮೃತಾ ಒ, ಬೇಂದ್ರೋಡು

ಹೊರಟ ಯಾತ್ರೆಯ ಜೊತೆಗೆ ಬಗಲ ಜೋಳಿಗೆಯಲ್ಲಿ

ಹೊಟ್ಟೆಪಾಡಿಗೆ ಸಾಲಲೊಂದು ಬುತ್ತಿ..

ಹಸಿದಾಗ ಉಣಬೇಕು, ತುಸು ವಿಶ್ರಮವು ಬೇಕು

ಹೊಸದಿನಕೆ ಹೊಸತನದ ಬೆನ್ನುಹತ್ತಿ ||

ನಾಳೆಗೂ ಇಡಬಹುದು ಹಸಿಯದಿರೆ, ಈ ಬುತ್ತಿ

ಬಳಸದಿರೆ ಬಡವಗೂ ಹಂಚಬಹುದು..

ಹಳಸದಿದ್ದರೆ ನಾಳೆ ಎಸೆಯದೆಯೆ ತಿನಬಹುದು

ಗಳಿಸಿದ್ದು ಶ್ರಮದಿ, ತಿಳಿ ಮನದಲೆಂದೂ ||

ಹಳಸಿದರೆ, ಹಳತುಗಳ ಹೊತ್ತು ಸಾಗಿಸಬೇಡ

ಕಳಚಿಬಿಡು ಅಲ್ಲಲ್ಲಿ, ನೀ ನಿರಾಳ !

ಹಳತುಗಳ ಸಿಕ್ಕವರ ಹೆಗಲಿಗೇರಿಸಬೇಡ,

ಹೊಲಸು ಕಳೆಯುತ ಮುಂದೆ ನಡೆಸು ಬಾಳ ||

ಹೊಸದಾಗಿ ಅಟ್ಟಡುಗೆ ಕಟ್ಟಿಬಿಡು ಮತ್ತೊಮ್ಮೆ

ಹಸನಾದ ಬಾಳ್ಗೆ ಶುಚಿ - ರುಚಿಯ ಬುತ್ತಿ

ಹಸಿಯೆ ಜೊತೆಗಿದ್ದವನ ನೀ ಕುಸಿಯಬಿಡಬೇಡ

ಕೈ ಹಿಡಿದು, ಜೊತೆ ನಡೆದು, ತುಂಬು ಶಕ್ತಿ ||

ಕೊಂಚ ಆರಿದರೇನು ? ಬಿಸಿ -ಬಿಸಿಯು ಬೇಕಿಲ್ಲ

ಚಾಚಬೇಕಿದೆ ಕಾಲು, ಹಾಸಿದಷ್ಟು

ಬಿಚ್ಚಿಡಲು ಈ ಬುತ್ತಿ ಘಮ್ಮೆನಿಸಬೇಕಿಲ್ಲ

ಹಸಿದವನು ಚಪ್ಪರಿಸಿ ತಿನುವ ತುತ್ತು ||

ಸಪ್ಪಗಿದ್ದರೆ ಸ್ವಲ್ಪ ಉಪ್ಪು ಸವರಲಿ ಸಾಕು

ಅಲ್ಪ ಖಾರವೆ ಇರಲಿ ಬದುಕ ಸ್ವಾದ

ಕಹಿಯಿರಲಿ ಒಂದಿನಿತು, ಸಿಹಿಯ ಅರಿವಾದೀತು

ಹುಳಿ, ಚೊಗರು ಜೊತೆಗಿದ್ದರೇನೆ ಮೋದ ||

ಹತ್ತು ಹಲವಿರಲಿ ರುಚಿ, ಸ್ವೀಕರಿಸಿ ಮುನ್ನಡೆಯು..

ಬುತ್ತಿಯಿದು, ನಾಳೆಗಳ ಬೆಳಗೊ ಬತ್ತಿ !

ಸಮನಾಗಿ ಸ್ವೀಕರಿಸು, ಹಸಿದವಗು ತುತ್ತುಣಿಸು

ಕುಸಿದಾಗ ಬರದಿರಲಿ ಚಿರವಿರಕ್ತಿ ||

Creative Writings