
Article · May 26, 2026
ನಮ್ಮ ಜೊತೆ ಜೊತೆಗೇ.....
- ಜಯಶ್ರೀ ಕೆ. ಆರ್. ಭಟ್ ಪಳ್ಳತಡ್ಕ
ಅಲ್ಲಿಹುದು ಸುರಲೋಕ, ಇಲ್ಲಿಹುದು ಭೂಲೋಕ
ಇನ್ನೆಲ್ಲಿಯೋ ಇಹುದು ಅಸುರಲೋಕ /
ಸಜ್ಜನರು ಸುರರಿಹರು, ಅಸುರರೋ ದುರ್ಜನರು,
ನಮ್ಮ ಜೊತೆಗೇ ಇಹರು ಸಾಕ್ಷಿ ಯಾಕ?
ಮನದ ನೆಮ್ಮದಿ ಕಸಿದು ನೋವ ನೀಡುವರಿವರು
ನೀನು ನೊಂದಾಗೊಮ್ಮೆ ಖುಷಿ ಪಡುವರು /
ನಾನು ನನ್ನದು ಎನುತ ಪರರನ್ನು ತುಳಿವವರು,
ಅಸುರರಲ್ಲದೆ ಅವರು ಬೇರೆಯಾರು? /
ನನ್ನ ಮುಷ್ಟಿಯ ಒಳಗೆ ಎಲ್ಲರೂ ಇರಬೇಕು,
ನಾ ಹೇಳಿದಂತವರು ಕೇಳಬೇಕು /
ನಾ ಮೆರೆಯುತಿರಬೇಕು, ನೀ ದಾಸನಿರಬೇಕು,
ಹೀಗೆಂದು ಬಯಸುವರು ಸಾಕ್ಷಿ ಸಾಕು /
ಹೆಸರು ಇವರಿಗೆ ಬೇಕು, ಅಧಿಕಾರ ಇರಬೇಕು,
ಮನಸು ಬಂದಂತೆಲ್ಲ ಮೆರೆಯಬೇಕು /
ಉಳಿದವರು ಹೇಗಿರಲಿ ಆಳಾಗಿಯೇ ಇರಲಿ,
ನನ್ನ ಕೈಕೆಳಗವರು ಇರಲಿ, ಸಾಕು /
ಬಯಕೆ ಇವರದು ಹೀಗೆ, ಮನದಲ್ಲಿ ಮಂಡಿಗೆ
ಸವಿಯುವರು ವಿಧವಿಧದ ಶೈಲಿಯಲ್ಲಿ
ನಂಬಿಕೆಗೆ ಮುಗ್ಧರಿಹ ಜನರು ನಂಬುವರಿವರ,
ಅಷ್ಟು ಸಾಕೂ ತುಳಿದು ನಿಲ್ಲುವವರು!
ನಿನ್ನ ಒಳಿತನೆ ನಾನು ಬಯಸುವುದು ಎನ್ನುವರು,
ತೋರಿಕೆಯ ಒಲವನ್ನು ತೋರುವವರು /
ಸಮಯ ಸಂದರ್ಭಗಳು ಸರಿಯಾಗಿ ದೊರೆತಾಗ,
ಮುಗ್ಧತೆಗೆ ದ್ರೋಹವನು ಬಗೆಯುವವರು /
ನೀನತ್ತು ನರಳಿರಲು, ಮಣ್ಣ ಪಾಲಾಗಿರಲು,
ಸಂಭ್ರಮವನಾಚರಿಸಿ ಕುಣಿಯುವವರು/
ನಿನ್ನ ನಂಬಿಕೆಯು, ಮುಗ್ಧತೆ, ಇವರ ವರದಾನ
ಬೆನ್ನ ಹಿಂದೆಯೆ ಚೂರಿ ಚುಚ್ಚುವವರು /
ಒಡಹುಟ್ಟಿದವರು, ಬಂಧುಗಳು ಬಾಂಧವರೆನುತ
ನಾಮಕಾವಸ್ಥೆಯಲಿ ಬಂಧಿಸುವರು /
ನೀನಂಬಿ ಬಂದಾಗ ನಿಜರೂಪ ತೋರುವರು
ನಂಬಿಸಿ ಕತ್ತನ್ನೆ ಕೊಯ್ಯುವವರು /
☘️☘️☘️☘️
Creative Writings
