Karada Vishwa

Article · May 30, 2026

ರಾಜೀನಾಮೆ...

- ಜಯಶ್ರೀ ಕೆ ಆರ್ ಭಟ್, ಪಳ್ಳತಡ್ಕ

☘️☘️☘️☘️
ಹೆಬ್ಬೆರಳ ಅಚ್ಚೊತ್ತಿ,
ಸಹಿಯ ಗೀಚಿದನವನು,
ನಿಬ್ಬೆರಗು ಪಡುವಂತೆ ಜನತೆ /

ಕೊಬ್ಬು ಅಧಿಕಾರದ್ದು 
ಕಳೆದು ಹೋಯಿತು ಇಂದು ',
ಗೆದ್ದು ಪಡೆದದ್ದಂದು ಘನತೆ/

ಕೊಂದು ಪ್ರಾಣಿಯ ಮಾಂಸ 
ತಿಂದು ತೇಗಿದ್ದವನು,
ದೇಗುಲದ ಎದುರಲ್ಲಿ ನಿಂದು/

ಕಲ್ಲು ಮೂರ್ತಿಯ ಒಳಗೆ 
ದೇವರಹರೇ? ಏನು?
ತಿಳುವಳಿಕೆ, ಭ್ರಮೆ ನಿಮ್ಮದೆಂದು /

ಮನಸು ಬಂದಂತೆಲ್ಲ 
ಅಧಿಕಾರ ನಡೆಸಿರಲು
ಶಪಿಸಿದರು ಜನ ಮನಸು ತುಂಬಿ/

ಸಜ್ಜನರು ಎಂದಿಗೂ 
ಮೂರ್ಖರಾಗಿರಲಿಲ್ಲ,
ಇಹರವರು ದೇವರನು ನಂಬೀ /

ಅಧಿಕಾರ, ಹಣದಮಲು,
ಕೈಯೊಳಗೆ ಇರುವಾಗ 
ಯಾವುದರು ಮಿತಿಯೆ ಇರಲಿಲ್ಲ /

ಪ್ರಾರಬ್ಧ ಕರ್ಮವದು 
ಬಂದು ಕಾಡಿತು ಇಂದು 
ಇಂದೀಗ ಅಧಿಕಾರವಿಲ್ಲ /

ನೊಂದು ನೋಯಿಸಿ 
ಜನರ ಕಿತ್ತು ತಿಂದನು ಎಲ್ಲ,               
ತನ್ನ ಹೊಟ್ಟೆಯ ತುಂಬಿಕೊಂಡ/

"ಶಿವ ಶಿವಾ"    ಏನೆಂದು 
ಹೇಳಲಿ ಹಣೆ ಬರಹ ?
ಎಲ್ಲವನು ಕಳಕೊಂಡನಲ್ಲ !/

ಒತ್ತಡವು ಏನಿತ್ತೊ, 
ಗ್ರಹಚಾರ ಕೆಟ್ಟಿತ್ತೋ, 
ವಿಧಿಲಿಖಿತ ಹೀಗಿತ್ತೊ ಕಾಣೇ /

ಪತ್ರದಲಿ ಸಹಿ ಮಾಡಿ 
ಕುರ್ಚಿಯಿಂದಿಳಿದಿಹನು 
ನೀಡಿ ಹುದ್ದೆಗೆ ರಾಜೀನಾಮೆ! /
Creative Writings
ರಾಜೀನಾಮೆ...