Karada Vishwa

Article · July 4, 2026

ಮುರಳೀಧರ

---ವೀಣಾ ಎಂ ಭಟ್

ಕದ್ದು ನೋಡುವೆ ಏಕೊ ಎಲೋ ಮಾಧವ

ಮುದ್ದು ಮಾಡಲು ಮೆಲ್ಲ ಹಿಂದಿನಿಂ ಬರುವ//ಕದ್ದು//

ತಿಂಗಳಾ ಬೆಳಕಿನಲಿ ನೀ ಮುರಳಿಯ ಊದಲು

ಅಂಗನೆಯರೆಲ್ಲ ಛಂಗನೆ ಅಂಗಳಕ್ಕೆ

ಮಂಗಳಾಂಗನ ಮುರಳಿ ಮೋಹನ ರಾಗ ಹಾಡಲು

ಸಿಂಗಾರಿಯರು ಶೃಂಗಾರ ಗಾನದಿ ತೇಲಿ//ಕದ್ದು//

ಕೊಳಲಗಾನವು ಚಂದ ನಳಿನನಾಭನೆ ದೇವಾ

ನಳಿನಾಕ್ಷಿಯರ ಕೂಡೆ ರಾಸಲೀಲೆಯಲಿ

ಕಾಳಿಂದಿ ತೀರದಲಿ ವಿಷ ಸರ್ಪವನು ಎತ್ತಿ

ಕಾಳಿಂಗ ಮರ್ದಿಸಿದೆ ನರ್ತನವ ಮಾಡಿ//ಕದ್ದು//

ಗೋಪಿಯರ ಮನೆಯಿಂದ ಬೆಣ್ಣೆ ಮೊಸರನು ಕದ್ದೆ

ಗೋಪಿಯರ ಹೃದಯವನು ಗೆದ್ದ ಚೋರನು ಆದೆ

ಗೋಕುಲದಿ ಕಿರು ಬೆರಳಲ್ಲಿ ಗಿರಿಯನು ಎತ್ತಿ

ಗೋವರ್ಧನ ಗಿರಿಧರನು ನೀನಾದೆ//ಕದ್ದು//

ಆದಿಶೇಷನ ಮೇಲೆ ಪವಡಿಸಿದ ಮಹಾವಿಷ್ಣು

ಆದಿ ಅಂತ್ಯಗಳೆರಡು ನಿನ್ನ ಕರದಲ್ಲಿ

ಅವತಾರವೆತ್ತಿ ನೀ ಗೀತೆಯನು ಬೋಧಿಸಿದೆ

ಅವತರಿಸಿ ಮಗದೊಮ್ಮೆ ಬಂದು ಬಿಡು ದೇವಾ//ಕದ್ದು//

Creative Writings