Karada Vishwa

Article · June 25, 2026

ಜನನದಿಂದ ಮರಣದವರೆಗೆ

✍🏻ಜಯಶ್ರೀ ಕೆ.ಆರ್ ಭಟ್. ಪಳ್ಳತಡ್ಕ

ಮನುಜ ನೀನು ಬಾಳಲೆಂದು
ಬೇಕು ಸ್ವಚ್ಛ ಪರಿಸರ |

ಉಸಿರಾಡಲು ಬೇಕೇ ಬೇಕು
ಆಮ್ಲಜನಕ ಸರಸರ II

ಸರಬರಾಜು ಮಾಡುತಿಹುದು

ಮರಗಳೆಂದು ತಿಳಿದುಕೋ |

ಮರಗಳನ್ನು ಕಡಿಯದೇನೆ

ದಟ್ಟವಾಗಿ ಬೆಳೆಸಿಕೋ||

ಪುಷ್ಪ ಪತ್ರ ಫಲಗಳೆಲ್ಲ
ನಿನಗೆ ಮಾತ್ರ ಅಲ್ಲವೋ |

ಹಂಚಿ ತಿನ್ನಬೇಕು ಇದನು
ಇತರ ಜೀವಕೆಲ್ಲವೂ||

ಜನನದಿಂದ ಮರಣವರೆಗೆ

ನೆರಳು ನೀಡೋ ಪರಿಸರ |

ಗಂಧ ನಿಡೋ ಪರಿಸರ
ಗಾಳಿ ನೀಡೋ ಪರಿಸರ Il

ಕಾಡು ಇದ್ದರೇನೆ ತಾನೆ

ಮಳೆಯು ಬೆಳೆಯು ಸಕಾಲಕೇ |

ಮರಳುಗಾಡಿನಲ್ಲಿ ಮಳೆಯು
ಬರದು, ಅರಿಯದೇತಕೆ? II

ನಿನ್ನ ಹಾಗೆ ಇತರ ಜೀವ-

-ರಾಶಿಗೆಲ್ಲ ಬದುಕಿದೇ |

ಅದನು ಹಾಳು ಮಾಡುವಂಥ

ಹಕ್ಕು ನಿನಗೆ ಎಲ್ಲಿದೇ? II

ಹಸಿರು ಇಲ್ಲದಿದ್ದ ಮೇಲೆ
ನಿನಗೆ ಉಸಿರು ಎಲ್ಲಿದೇ?|

ಜೋಕೆಯಿಂದ ಪರಿಸರವ

ಉಳಿಸಿ ಬೆಳೆಸಬೇಕಿದೆ II

ನಾಲ್ಕು ದಿನದ ಬದುಕು ಇಲ್ಲಿ
ದೇಹವಿದು ನಶ್ವರ |

ಗಡುವು ನೀಡಿ ಕಳುಹಿಸಿರುವ 
ನಮ್ಮನಿಲ್ಲಿ  ಈಶ್ವರ II

ನಮ್ಮ ಸರದಿ ಬರುವವರೆಗೆ

ಬೇಕು ಗಾಳಿ ವಿನಿಮಯ I

ಉಸಿರ ಪಡೆದು ಉಸಿರ ನೀಡಿ
ಸವೆಸು ಬಾಳು ಸುಖಮಯ II

☘️☘️☘️☘️☘️

Creative Writings