Karada Vishwa

Article · July 2, 2026

ಮುದಿ ಹರಯ

- - ವೀಣಾ ಎಂ ಭಟ್

ಬಾರೆ ಸಖಿ ಸಾಗೋಣ ಚಿತ್ತ ಹರಿಸಿದ ಅತ್ತ

ಮತ್ತೆ ಬರುವುದೊ ಜನನ ಇದು ದೈವ ಚಿತ್ತ

ತೊಗಲು ತೂಗಿದರೇನು ಬಗಲಲ್ಲಿ ನೀನಿರಲು

ಹೆಗಲಿಗೆ ಹೆಗಲಾಗಿ ಕೊಡುವ ಜೀವ ಇರಲು ||

ಆಗಸವೆ ಸೂರೆಮಗೆ ಬಯಲೆ ಗುಡಿ ಎಮಗೆ

ಹಗಲು ಇರುಳಲಿ ಕಳ್ಳರ ಹಂಗಿಲ್ಲ ನಮಗೆ

ಮುಷ್ಟಿ ಅನ್ನವ ನೀಡೆ ಅಶನ ಉಂಟೆಮಗೆ

ಇಷ್ಟ ಇಲ್ಲದಿರೆ ಏಕಾದಶಿ ಉಪವಾಸವು ಎಮಗೆ ||

ಮುದಿತನಕೆ ಬಾಗುವುದು ಹರಯವು ಇಂದು

ಹದಿಹರೆಯ ಹೋಯಿತಲ್ಲ ಜಾರಿ ಮುಂದು

ಗೆಳೆತನಕೆ ಸರಿಸಾಟಿ ಯಾವುದಿದೆ ನಮ್ಮಲ್ಲಿ

ಸಿರಿತನಕೆ ಸಡ್ಡು ಹೊಡೆದ ಜನುಮ ನಮ್ಮದಿಲ್ಲಿ ||

ಉಡುಗುತಿದೆ ಧೈರ್ಯವು ನಡುಗುತಿವೆ ಕೈಕಾಲು

ಕೆಡುತಿದೆ ಮನಸಿನ ಸಮತೋಲನವು ಎಲ್ಲ

ಚೈತನ್ಯ ತುಂಬುವುದು ನಿನ್ನ ಒಲುಮೆಯಿಂದ

ಆಶ್ರಯದ ಆಶಯವು ಎನಗೆ ನಿನ್ನಿಂದ ||

Creative Writings