
Article · March 18, 2026
ಕರುನಾಡ ಮಾಣಿಕ್ಯ
- ಸೌಮ್ಯಾ ಭಟ್ ಅಂಗ್ರಾಜೆ
( ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ, ಬೆಂಗಳೂರು ಇವರು ನಡೆಸಿದ ನಾಕುತಂತಿ ಷಷ್ಟಿಪೂರ್ತಿ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಂಗವಾಗಿ ನಡೆಸಿದ ಸ್ಪರ್ಧೆಯಲ್ಲಿ ಮೆಚ್ಚುಗೆ ಪಡೆದ ಕವನ)
ಶಿವಶಕ್ತಿಯನ್ನು ಪ್ರಕೃತಿಯೊಳು ಕಂಡ
ಮೇರುಗಿರಿ ಸದೃಶ ಬೇಂದ್ರೆ
ಜೀವನವು ಬೆರಗಾಗುವಂಥ ಕೃತಿಯು
ತೆರೆದಿಟ್ಟರೆಮ್ಮ ಮುಂದೆ//
ಪದಪದವ ಕುಣಿಸಿ ದಣಿವಂತೆ ಮಣಿಸಿ
ಕಟ್ಟಿದರು ಕಾವ್ಯ ಮಾಲೆ
ಅಧ್ಯಾತ್ಮ ಒಲವು ಸಮರಸದಿ ಬೆರೆಸಿ
ಮುಟ್ಟಿದರು ಹೃದಯ ಶಾಲೆ//
ಭಾವನೆಗಳ ಎರಕ ಹೊಯ್ಯುವ ನಿಪುಣ
ವರಕವಿಗೆ ಅವರೇ ಸಾಟಿ
ಅಮೋಘ ಕವನ ಕುಸುಮಕಿಹ ಘಮವು
ಅರ್ಥಲಯ ಅನನ್ಯ ಧಾಟಿ//
ಬದುಕಿನೊಳ ಸತ್ಯ ದರ್ಶಿಸಿದರಲ್ಲಿ
ನಾಕುತಂತಿಯನು ಮೀಟಿ
ಘನತೆಯದು ತೂಕ ತಲೆಬಾಗುವಂತೆ
ದುಃಖಕಡಲನ್ನು ಬಂದರು ದಾಟಿ//
ಗರಿ ಕಟ್ಟಿ ತೂಗಿದರು ಬಾಳಿನುಯ್ಯಾಲೆ
ಕರೆದು ಚೇತನ ಜೀವಲಹರಿ
ಯುಗಾದಿ ಶ್ರಾವಣಕೆ ನಗುತ ನಿಲುವಂತೆ
ತರುಲತೆಗಳು ಮರಳಿ ಚಿಗುರಿ//
ನಾಡುನುಡಿ ಪ್ರೀತಿ ಸೃಷ್ಟಿ ಶಿವಶರಣರು
ಹೃದ್ಯ ರಚನೆಗವರ ಸ್ಫೂರ್ತಿ
ಅಕ್ಷರದ ಮಾಂತ್ರಿಕ ಕರುನಾಡ ಮಾಣಿಕ್ಯ
ಕವಿವರ್ಯ ಕನ್ನಡದ ಕೀರ್ತಿ//
ಜ್ಞಾನಪೀಠ ಪದ್ಮಶ್ರೀ ಮುಡಿಗೇರಿಸಿದ
ಭುವನೇಶ್ವರಿಯ ಹೆಮ್ಮೆ ಕುವರ
ಗೀತೆ ಸಾಹಿತ್ಯದಿ ಕಲಿನಲಿಯೆ ಕದತೆರೆದ
ಧಾರವಾಡದ ಅಜ್ಜ ಅಮರ//
- ಸೌಮ್ಯಾ ಭಟ್ ಅಂಗ್ರಾಜೆ
W/O ಪ್ರಕಾಶ್ ಅಂಗ್ರಾಜೆ
ಬೆಂಗಳೂರು

Creative Writings
